ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣಗೊಂಡಿರುವ ಅದ್ದೂರಿ ಐತಿಹಾಸಿಕ ಚಲನಚಿತ್ರ `ಮಹಾಶರಣ ಹರಳಯ್ಯ` ಚಿತ್ರದ ಆಡಿಯೊ ಹಾಸನದಲ್ಲಿ ಸಂಭ್ರಮ-ಸಡಗರದೊಂದಿಗೆ ಬಿಡುಗಡೆಗೊಂಡಿತು. ಈ ಅಪೂರ್ವ ಕ್ಷಣಕ್ಕೆ ನಟರಾದ ರಮೇಶ್ ಅರವಿಂದ್, ರಮೇಶ್ ಭಟ್, ರಾಮಕೃಷ್ಣ, ರಾಜವರ್ಧನ್, ವಿಕ್ರಂ ಉದಯಕುಮಾರ್, ನಟಿಯರಾದ ಶೀಲಾ, ಸ್ವಾತಿ, ಕವನ, ನಿರ್ಮಾಪಕ ಕನಕಪುರ ಶ್ರೀನಿವಾಸ್, ಹಾಸನದ ಚುಂಚನಗಿರಿ ಶಾಖಾ ಮಠದ ಪೀಠಾಧಿಪತಿಗಳಾದ ಶಂಭುನಾಥ ಸ್ವಾಮೀಜಿ, ಬಸರಿಘಟ್ಟ ಶಾಖಾ ಮಠದ ಪೀಠಾಧಿಪತಿಗಳಾದ ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ಚಿತ್ರದ ನಿರ್ಮಾಪಕರಾದ ಕೆ.ಎನ್.ವೆಂಕಟೇಶ್, ಕೆ.ವಿ.ರವಿಚಂದ್ರ, ಎ.ದೇವರಾಜ್ ಹಾಗೂ ಚಿತ್ರದ ನಿರ್ದೇಶಕರಾದ ಬಿ.ಎನ್.ಪುರುಷೋತ್ತಮ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. `ಮಹಾಶರಣ ಹರಳಯ್ಯ` ಚಿತ್ರದ ಸಿಡಿಯ ಮುಖಬೆಲೆ 120 ರೂ. ಇದ್ದು, ಆ ಸಿಡಿಯೊಂದಿಗೆ ಒಂದು ಕೂಪನ್ ನೀಡಲಾಗುತ್ತದೆ. ಆ ಕೂಪನ್ ಗೆ ಎರಡು ಬಾಲ್ಕನಿ ಟಿಕೆಟ್ ಗಳು ದೊರೆಯಲಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಚಿತ್ರವನ್ನು ವೀಕ್ಷಿಸಬಹುದು ಎನ್ನುತಾರೆ ನಿರ್ದೇಶಕ ಬಿ.ಎನ್.ಪುರುಷೋತ್ತಮ್. ಈಗಾಗಲೇ ಚಿತ್ರದ 2 ಲಕ್ಷ ಸಿಡಿಗಾಗಿ ಬೇಡಿಕೆ ಬಂದಿದ್ದು, ಅವುಗಳಲ್ಲಿ 1 ಲಕ್ಷ ಸಿಡಿಗಾಗಿ ಕರ್ನಾಟಕ ರಾಜ್ಯ ಹರಳಯ್ಯ ಸಮಾಜದವರು ಬೇಡಿಕೆ ಸಲ್ಲಿಸಿದ್ದಾರಂತೆ. ಚಿತ್ರದಲ್ಲಿ ಒಟ್ಟು 12 ಹಾಡುಗಳಿದ್ದು ಎಲ್ಲವೂ ಸುಮಧುರವಾಗಿ ಮೂಡಿ ಬಂದಿವೆ ಎಂಬುದು ನಿರ್ದೇಶಕ ಬಿ.ಎನ್.ಪುರುಷೋತ್ತಮ್ ಅವರ ಅಂಬೋಣ. ಚಿತ್ರಕ್ಕೆ ಇಳಯರಾಜ ಅವರ ಶಿಷ್ಯರಾದ ಜಿಮ್ಮಿರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ಮುಂದಿನ ಅಕ್ಟೋಬರ್ ಕೊನೆಯ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.